ABC

Thursday, 14 February 2019

ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು, ಚರ್ಚೆಯಾಗದೆ ಬಜೆಟ್-ರಾಜ್ಯಪಾಲರ ಭಾಷಣ ಅಂಗೀಕಾರ.

ಬೆಂಗಳೂರು: ವಿಧಾನಸಭೆಯಲ್ಲಿಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ಮೇಲಿನ ಲೇಖಾನುದಾನ ಮತ್ತು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ, ಯಾವುದೇ ಚರ್ಚೆ ಇಲ್ಲದೆ ಧ್ವನಿ ಮತದಾನ ಮೂಲಕ ಅಂಗೀಕಾರಗೊಂಡಿತು.
ವಿಧಾನಸಭೆಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಶಾಸಕರು ಧರಣಿಯನ್ನು ಮುಂದುವರೆಸಿ ಹಾಸನದಲ್ಲಿ ಶಾಸಕ ಪ್ರೀತಂ ಗೌಡ ಅವರ ಮನೆ ಮೇಲಿನ ದಾಳಿಯನ್ನು ಖಂಡಿಸಿದರು.
ಈ ಹಂತದಲ್ಲಿ ಸಭಾಧ್ಯಕ್ಷರು ವಿಧಾನಸಭೆಯ ಕಲಾಪವನ್ನು ಮುಂದುವರೆಸಿದರು. ವರದಿಯನ್ನು ಒಪ್ಪಿಸುವುದು, ಅರ್ಜಿಗಳನ್ನು ಒಪ್ಪಿಸುವ ಕಲಾಪದ ನಂತರ ರಾಜ್ಯಪಾಲರ ಭಾಷಣದ ಮೇಲಿನ ವಂದನಾರ್ಪಣ ಪ್ರಸ್ತಾವಕ್ಕೆ ಅವಕಾಶ ನೀಡಲಾಯಿತು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಫೆ.6ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಪ್ರಸ್ತಾವವನ್ನು ಮಂಡಿಸಿದರು.
ಆಡಳಿತ ಪಕ್ಷದ ಸದಸ್ಯರು ಪ್ರಸ್ತಾವದ ಪರವಾಗಿ ಹೌದು ಎಂದು ಬೆಂಬಲಿಸಿದರೆ, ವಿರೋಧ ಪಕ್ಷವಾದ ಬಿಜೆಪಿ ಸದಸ್ಯರು ಧರಣಿ ನಡೆಸುತ್ತಿದ್ದ ಸ್ಥಳದಿಂದಲೇ ಇಲ್ಲ ಎಂದು ಪ್ರತಿಕ್ರಿಯಿಸಿದರು.
ನಂತರ ನಿತ್ಯಕಾರ್ಯ ಕಲಾಪದಲ್ಲಿ ಸಿಎಂ ಕುಮಾರಸ್ವಾಮಿ 2018-19ನೇ ಸಾಲಿನ 14,581.43 ಕೋಟಿ ಪೂರಕ ಅಂದಾಜನ್ನು ಮಂಡಿಸಿದರು. ನಂತರ 2019-20ನೇ ಸಾಲಿನ ಆಯ್ಯವಯದ ಮಂಡನೆಯಾಯಿತು.
2019-20ನೇ ಸಾಲಿನ ಆಯವ್ಯಯವನ್ನು ಮಂಡಿಸಿದ್ದ ಕುಮಾರಸ್ವಾಮಿಯವರು ಜೂನ್‍ವರೆಗೆ ಲೇಖಾನುದಾನಕ್ಕೆ ಅಂಗೀಕಾರ ಕೋರಿದರು. ಜುಲೈ ಅಂತ್ಯದ ತಿಂಗಳೊಳಗೆ ಬೊಕ್ಕಸದಿಂದ 80,16,83.60 ಲಕ್ಷ ರೂಪಾಯಿಗಳ ಖರ್ಚಿಗೆ ಲೇಖಾನುದಾನ ಕೋರಿದಾಗ ವಿಧಾನ ಮಂಡಲ ಧ್ವನಿ ಮತದ ಮೂಲಕ ಅಂಗೀಕಾರ ನೀಡಿತು.ಧರಣಿನಿರತ ಬಿಜೆಪಿ ಸದಸ್ಯರು ಇಲ್ಲ ಎಂದು ಪ್ರತಿರೋಧಿಸಿದರೂ ವಿಭಜನೆಯ ಮತ ಕೇಳದೆ ಇದ್ದುದರಿಂದ ಬಜೆಟ್ ನಿರಾಂತಕವಾಗಿ ಅಂಗೀಕಾರಗೊಂಡಿತು. ವಿಧಾನಸಭೆಯ ಇತಿಹಾಸದಲ್ಲೇ ಬಜೆಟ್ ಮತ್ತು ರಾಜ್ಯಪಾಲರ ಭಾಷಣಗಳು ಚರ್ಚೆ ಇಲ್ಲದೆ ಅಂಗೀಕಾರಗೊಂಡಿದ್ದು ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಈ ಮೊದಲೆಲ್ಲ ರಾಜಕೀಯ ಕಾರಣಕ್ಕಾಗಿ ಹಲವಾರು ಬಾರಿ ವಿಧಾನಸಭೆಗಳಲ್ಲಿ ಪ್ರತಿಭಟನೆಗಳಾಗಿವೆ. ಧರಣಿ ನಡೆದಿವೆ. ಕೂಗಾಟ,ಗದ್ದಲ ಎಲ್ಲವೂ ಸಂಭವಿಸಿದೆ.
ಆದರೆ ರಾಜ್ಯಪಾಲರ ಭಾಷಣದ ಮೇಲೆ ಮತ್ತು ಬಜೆಟ್ ಮೇಲೆ ಚರ್ಚೆಯಾಗದೆ ಅಂಗೀಕಾರಗೊಂಡ ಉದಾಹರಣೆಗಳು ಇಲ್ಲ ಎನ್ನಲಾಗುತ್ತಿದೆ.
ರಾಜ್ಯದ ಜನಸಾಮಾನ್ಯರ ಹಣವನ್ನು ವಿನಿಯೋಗಿಸುವ ಮಹತ್ವದ ಲೇಖಾನುದಾನಕ್ಕೆ ಅಂಗೀಕಾರ ನೀಡಬೇಕಾದರೆ ಅದರ ಸಾಧಕ-ಬಾಧಕಗಳನ್ನು ಚರ್ಚೆಸದೆ ಇರುವುದು ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.ರಾಜಕೀಯ ಕಾರಣಗಳೇನೇ ಇರಲಿ ಬಜೆಟ್‍ನಂತಹ ವಿಷಯದಲ್ಲೂ ಚರ್ಚೆ ನಡೆಯದೇ ಹೋಗಿದ್ದು, ವಿಪರ್ಯಾಸ. ನಿನ್ನೆ ನಾಲ್ಕು ವಿವಿಗಳು, ಶಿಕ್ಷಕರ ವರ್ಗಾವಣೆ, ಋಣಭಾರ ತೀರುವಳಿ ಕಾಯ್ದೆಯಂತಹ ಮಹತ್ವದ ವಿಧೇಯಕಗಳು ಒಂದು ವಾಕ್ಯವೂ ಚರ್ಚೆಯಾಗದೆ ಅಂಗೀಕಾರಗೊಂಡವು.
ಬಜೆಟ್ ಮತ್ತು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ನಿನ್ನೆಯೇ ಅಂಗೀಕಾರ ಸಿಗಲಿದೆ ಎಂಬ ನಿರೀಕ್ಷೆಗಳಿದ್ದವು. ಆದರೂ ಚರ್ಚೆಯಾಗದೆ ಅಂಗೀಕಾರಗೊಳ್ಳಬಾರದು ಎಂಬ ಕಾರಣಕ್ಕಾಗಿ ವಿಧಾನಸಭಾಧ್ಯಕ್ಷರು ಕಲಾಪವನ್ನು ಇಂದಿಗೆ ಮುಂದೂಡಿದ್ದರು.
ಇಂದು ಚರ್ಚೆಗೆ ಅವಕಾಶವಿತ್ತಾದರೂ ಧರಣಿ ಘೋಷಣೆಗಳಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಾಮಾನ್ಯ ಕಲಾಪಗಳನ್ನು ಸಾಂಪ್ರದಾಯಿಕವಾಗಿ ಪೂರ್ಣಗೊಳಿಸಿದ ಸ್ಪೀಕರ್ ಅವರು ಸದನ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಬಜೆಟ್ ಅಂಗೀಕಾರ ಮತ್ತು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಮತಕ್ಕೆ ಹಾಕಿದರು.
ಈ ಮೊದಲು ಸರ್ಕಾರ ಅಸ್ಥಿರಗೊಳಿಸುವ ಭಾಗವಾಗಿ ಮೊದಲ ಹಂತದಲ್ಲಿ ಬಜೆಟ್ ಪ್ರಸ್ತಾವನೆಯನ್ನು ಸೋಲಿಸಲು ಮುಂದಾಗಿದ್ದ ಬಿಜೆಪಿ ಅದಕ್ಕಾಗಿ ಶಾಸಕರನ್ನು ಕ್ರೋಢೀಕರಿಸುವ ಕೆಲಸ ಮಾಡಿತ್ತು.
ಆದರೆ ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳ ಕಾರ್ಯಚರಣೆಯಿಂದಾಗಿ ಮತ್ತು ಆಪರೇಷನ್ ಕಮಲದ ಆಡಿಯೋ ಬಿಡುಗಡೆಯಿಂದಾಗಿ ಉಂಟಾದ ಬೆಳವಣಿಗೆಯಲ್ಲಿ ಕಾಂಗ್ರೆಸ್ 4 ಅತೃಪ್ತ ಶಾಸಕರು, ಜೆಡಿಎಸ್‍ನ ಒಬ್ಬ ಹಾಗೂ ಇಬ್ಬರು ಪಕ್ಷೇತರ ಶಾಸಕರು ಸೇರಿದಂತೆ ಆಡಳಿತ ಪಕ್ಷದ ಎಲ್ಲ ಶಾಸಕರು ಹಾಜರಿದ್ದರು.
ಒಂದು ವೇಳೆ ವಿಭಜನೆ ಮತಕ್ಕೆ ಹಾಕಿದರೆ ಆಡಳಿತ ಪಕ್ಷಕ್ಕೆ ಗೆಲುವಾಗಬಹುದು ಎಂಬ ಕಾರಣಕ್ಕಾಗಿ ಬಿಜೆಪಿ ತನ್ನ ಪ್ರತಿಭಟನೆಯನ್ನು ಮುಂದುವರೆಸುವ ಮೂಲಕ ಬಜೆಟ್ ಪ್ರಸ್ತಾವನೆ ಸಲ್ಲಿಸುವ ಪ್ರಸ್ತಾವನೆಯನ್ನು ಕೈಬಿಟ್ಟಿತ್ತು. ರಾಜಕೀಯ ಏನೇ ಇದ್ದರೂ ಮಹತ್ವದ ವಿಷಯಗಳು ವಿಧಾನಸಭೆಯಲ್ಲಿ ಚರ್ಚೆಯಾಗದೇ ಹೋಗಿದ್ದು ಕಲಾಪದ ನಡೆವಳಿಕೆಗಳಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಹೋಗಿದೆ.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...