ABC

Saturday, 2 February 2019

ಮೋದಿಯ ಬಜೆಟ್‌ ಕಸಕ್ಕೆ ಸಮ: ರೈತ ಸಂಘ ಪ್ರತಿಭಟನೆ

ಚಾಮರಾಜನಗರ : ರೈತರಿಗೆ ಕಡಿಮೆ ಪ್ರಮಾಣದ ವಾರ್ಷಿಕ ನಗದು ಸೌಲಭ್ಯ ನೀಡಿರುವ ಕೇಂದ್ರ ಸರ್ಕಾರದ ಬಜೆಟ್‌, ರೈತ ವಿರೋಧಿ ಬಜೆಟ್‌ ಆಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ರೈತರು, ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು. ಕಸದ ಗಾಡಿಗೆ ಮೋದಿ ಭಾವಚಿತ್ರ ಇಟ್ಟು 'ಮೋದಿ ಬಜೆಟ್‌ ಕಸಕ್ಕೆ ಸಮ' ಎಂದು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, 'ಸಣ್ಣ ಹಿಡುವಳಿ ರೈತರಿಗೆ ಪ್ರತಿ ವರ್ಷಕ್ಕೆ ₹ 6 ಸಾವಿರ ನಗದು ನೀಡುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಅಂದರೆ ತಿಂಗಳಿಗೆ ₹ 500 ಆಗುತ್ತದೆ. ದಿನಕ್ಕೆ ₹ 17 ಬಿಡಿಗಾಸು ನೀಡಿದೆ. ರೈತರಿಗೆ ಈ ಹಣದಿಂದ ಯಾವುದೇ ಪ್ರಯೋಜನವಿಲ್ಲ' ಎಂದು ದೂರಿದರು.
ಡಾ.ಸ್ವಾಮಿನಾಥನ್‌ ವರದಿ ಜಾರಿಯಾಗಬೇಕು: '2014ರ ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಲು ಬದ್ಧವೆಂದು ಭರವಸೆ ನೀಡಿದ್ದರು. ಆದರೆ, ಕೇಂದ್ರದ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾವವಿಲ್ಲ. ಇದು ಮೋದಿಯ ದ್ವಂದ್ವನೀತಿಯನ್ನು ಎತ್ತಿ ತೋರಿಸುತ್ತದೆ. ಡಾ.ಸ್ವಾಮಿನಾಥನ್‌ ವರದಿ ಜಾರಿಗೊಳಿಸಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು' ಎಂದರು.
ಸಾಲಮನ್ನಾ ಬೇಡ, ವೈಜ್ಞಾನಿಕ ಬೆಲೆ ಬೇಕು: 'ರೈತರಿಗೆ ಸಾಲಮನ್ನಾದ ಅಗತ್ಯವಿಲ್ಲ. ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು. ಈ ಬಜೆಟ್‌ನಲ್ಲಿ ಅಂತಹ ಲಕ್ಷಣಗಳಿಲ್ಲ. ಎಲ್ಲ ರೈತರಿಗೆ ಅಗತ್ಯವಿರುವ ಬೆಳೆ ವಿಮಾ ನೀತಿ ಜಾರಿಗೊಳಿಸಬೇಕು. ಇಂತಹ ಅನೇಕ ರೈತಪರ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಘೋಷಣೆ ಮಾಡಿಲ್ಲ' ಎಂದು ಆರೋಪಿಸಿದರು.
ಚುನಾವಣೆಯಲ್ಲಿ ತಕ್ಕಪಾಠ: ರೈತರನ್ನು ನಿರ್ಲಕ್ಷಿಸಿದ ಮೋದಿ ಅವರು ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಯಲಿದ್ದಾರೆ. ರೈತರ ಸಹಾಯಕ್ಕೆ ಧಾವಿಸದಿದ್ದರೆ ಮುಂದಿನ ದಿನಗಳಲ್ಲಿ ರೈತರೇ ಪಾಠ ಕಲಿಸಿ ಅಧಿಕಾರದಿಂದ ಕೆಳಗಿಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಾ.ಗುರುಪ್ರಸಾದ್, ಮುಖಂಡರಾದ ಮಾಡ್ರಳ್ಳಿ ಮಹದೇವಪ್ಪ, ಅಂಬಳೆ ಶಿವಕುಮಾರ್, ನಿಂಗಸ್ವಾಮಿ, ಗುರು, ದಡದಹಳ್ಳಿ ಮಹೇಶ್, ಮಹದೇವಶೆಟ್ಟಿ, ಮಹದೇವ್‌, ಸಿದ್ದಶೆಟ್ಟಿ, ಮಹೇಶ್‌ ಭಾಗವಹಿಸಿದ್ದರು.

ಪ್ರತಿಬಾರಿಯೂ ಕಾರ್ಪೊರೇಟ್‌ ವಲಯಕ್ಕೆ ಮಣೆ ಹಾಕುವ ನರೇಂದ್ರ ಮೋದಿ ಅವರು ಉದ್ಯಮಿಗಳ ಪರವಾಗಿದ್ದು, ರೈತರ ವಿರೋಧಿಯಾಗಿದ್ದಾರೆ. ಅವರು ಉದ್ಯಮಿ ಮುಕೇಶ್‌ ಅಂಬಾನಿಯ 'ಚಮಚಾ'ರಂತೆ ಕೆಲಸ ಮಾಡುತ್ತಿದ್ದಾರೆ' ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...