ಮಂಡ್ಯದ ಸೊಸೆಯಾದ ಸುಮಲತಾ ಅಂಬರೀಷ್ ಬದಲಿಗೆ ಮಂಡ್ಯದ ಮನೆಮಗಳನ್ನೇ ಅಖಾಡಕ್ಕಿಳಿಸಲು ಜೆಡಿಎಸ್ ತಂತ್ರ ರೂಪಿಸಿದೆ. 2 ಬಾರಿ ಜೆಡಿಎಸ್ನಿಂದ ಟಿಕೆಟ್ ವಂಚಿತರಾಗಿದ್ದ ಮಂಡ್ಯದ ಲಕ್ಷ್ಮೀ ಅಶ್ವಿನ್ ಗೌಡ ಅವರಿಗೆ ಈಗ ಅವಕಾಶ ನೀಡಲು ಜೆಡಿಎಸ್ ಮುಂದಾಗಿದೆ ಎನ್ನಲಾಗಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಅಖಾಡಕ್ಕಿಳಿಯಲು ಕಾಂಗ್ರೆಸ್- ಜೆಡಿಎಸ್ ಸಜ್ಜಾಗಿವೆ. ಆದರೆ, ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಎರಡೂ ಪಕ್ಷಗಳಿಗೆ ಕಗ್ಗಂಟಾಗಿದೆ. ಅಂತಹ ಕ್ಷೇತ್ರಗಳಲ್ಲಿ ಮಂಡ್ಯ ಕೂಡ ಒಂದು. ಜೆಡಿಎಸ್ನ ಪ್ರಭಾವ ಹೆಚ್ಚಿರುವ ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರ ಹವಾ ಕೂಡ ಜೋರಾಗೇ ಇದೆ. ಅಲ್ಲದೆ, ಈ ಬಾರಿಯ ಚುನಾವಣೆಗೆ ಅಂಬರೀಷ್ ಅವರ ಪತ್ನಿ ಸುಮಲತಾಗೆ ಮಂಡ್ಯದಿಂದ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ಬೆಂಬಲಿಗರು ಪಟ್ಟು ಹಿಡಿದಿದ್ದರು.
ಇತ್ತ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರ್ ಮಂಡ್ಯದಿಂದ ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಹೀಗಾಗಿ, ಇಲ್ಲಿನ ಟಿಕೆಟ್ ಹಂಚಿಕೆ ಒಂದು ರೀತಿಯ ಸವಾಲಿನದ್ದಾಗಿತ್ತು. ಆದರೆ, ಇದೀಗ ಹೊಸ ಲೆಕ್ಕಾಚಾರ ನಡೆಸಿರುವ ದೇವೇಗೌಡರು ಜಾಣತನ ಹೆಜ್ಜೆಯಿಡುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯಲು ಮುಂದಾಗಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
No comments:
Post a Comment